Sep 18: ಸೆಪ್ಟೆಂಬರ 8 ಮಾತೆ ಮರಿಯಮ್ಮನವರ ಜಯಂತಿ. ಇದೊಂದು ಕುಟುಂಬದ ಸಡಗರದ ವಿಶೇಷ ಹಬ್ಬ. ಪ್ರಕೃತಿ ಮಾತೆಗೆ ಭಕ್ತಿ ಪೂರ್ವಕವಾಗಿ ವಂದಿಸುವುದೇ ಈ ಹಬ್ಬದ ವಿಶೇಷತೆ. ಸಂತ ಅಂದ್ರೇಯವರು ಹೇಳುವಂತೆ, ಸಮಸ್ತ ಸೃಷ್ಟಿಯ ಒಡೆಯ, ಸೃಷ್ಟಿಕರ್ತ ತನ್ನ ಅಲಯವನ್ನು ತನ್ನ ವಾಸಸ್ಥಾನವನ್ನು ತನ್ನ ನಿಲಯವನ್ನು ರೂಪಿಸಿದಂತಹ ದಿನ ಮಾತ್ರವಲ್ಲ, ಸೃಷ್ಟಿಯೇ ಆ ಸೃಷ್ಟಿಕರ್ತನಿಗೆ ವಾಸಿಸಲು ನೆಲೆಸಲು ಸ್ಥಳವನ್ನು ಅಣಿಗೊಳಿಸಿದಂತಹ ದಿನ. ಈ ದಿನದಂದು ನಮ್ಮ ಶಾಲೆಯಲ್ಲಿ  “ಹೆಣ್ಣು ಬಾಳಿನ ಕಣ್ಣು” ಎಂಬಂತೆ ಹೆಣ್ಣು ಮಗುವಿನ ಇರುವಿಕೆಯ ಶ್ರೇಷ್ಠತೆಯನ್ನು ಸಾರುವುದಕ್ಕಾಗಿ ನಮ್ಮ ಶಾಲೆಯಲ್ಲಿ ಸೆಪ್ಟೆಂಬರ 7 ರಂದು “ಹೆಣ್ಣು ಮಗುವಿನ” ದಿನಾಚರಣೆಯನ್ನು ಆಚರಿಸುವುದು ಹೆಮ್ಮೆಯ ವಿಷಯ. ಅದರಂತೆ ಈ ವರ್ಷವೂ ಕೂಡ ಬಹು ಅರ್ಥಗರ್ಭಿತವಾಗಿ ಆಚರಿಸಲಾಯಿತು. ಜ್ಯೋತಿ ಸೇವಾ ಕೇಂದ್ರದ ಪ್ರಾಜೇಕ್ಟ ಮ್ಯಾನೇಜರ ಆಗಿರುವ ಭಗಿನಿ ಲೂಸಿ ಪ್ರೀಯಾರವರು ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಿ ಹೆಣ್ಣು ಮಕ್ಕಳ ಜವಾಬ್ದಾರಿಯುತವಾದ ಜೀವನವನ್ನು ಕುರಿತು ಸವಿವರವಾಗಿ, ಕಾಳಜಿಪೂರ್ವಕವಾಗಿ ಮಕ್ಕಳ ಮನಮುಟ್ಟುವಂತೆ ಹಲವಾರು ಉದಾಹರಣೆಗಳನ್ನು ಕೊಡುವುದರ ಮೂಲಕ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೂಡ ಕೆಲವೊಂದು ಹಾಡು, ಭಾಷಣಗಳ ಮೂಲಕ ಹೆಣ್ಣು ಮಗುವಿನ ಮಹತ್ವವನ್ನು ಸಾರಿದರು.

ಜೊತೆಗೆ ಸಹ ಶಿಕ್ಷಕರಾದ ಶ್ರೀಯುತ ಭೀಮರೆಡ್ಡಿ ಸರ್ ಅವರು ಮಾತನಾಡುತ್ತ ಬೆಥನಿ ಭಗಿನಿಯರ ತ್ಯಾಗ ಜೀವನವನ್ನು ಕುರಿತು, ಭಗಿನಿ ಕವಿತಾ ಅವರ ಕಾರ್ಯನಿಷ್ಟತೆಯ ಒಂದು ಘಟನೆಯನ್ನು ವಿವರಿಸುತ್ತಾ ಎಲ್ಲ ಭಗಿನಿಯರ ಜೀವನದ ಶ್ರೇಷ್ಟತೆಯನ್ನು ಹೊಗಳುತ್ತ ಇಂತಹ ಸಂಸ್ಥೆಯಲ್ಲಿ ನಾವೆಲ್ಲರೂ ಸಹಭಾಗಿಯಾಗಿದ್ದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು. ಅಲ್ಲದೆ ಕಾರ್ಯಕ್ರಮ ಯಶಸ್ವಿಗೆ ಕಾರಣರಾದ ಪ್ರತಿಯೊಬ್ಬರಿಗೂ ವಂದನೆಗಳನ್ನು ಸಲ್ಲಿಸುತ್ತ ಕಾರ್ಯಕ್ರಮಕ್ಕೆ ವಿರಾಮ ನೀಡಿದರು.

 

 

 

 

 

 

ಭಗಿನಿ ಸೆಲಿನ, ಶಾಲೆಯ ಸಂಚಾಲಕರು
ಚಿತ್ತಾಪೂರ