Aril 11: ಮಾರ್ಚ್ 11, 2022ರ ಶುಕ್ರವಾರದಂದು 2021-22ನೇ ಸಾಲಿನ 8, 9 ಮತ್ತು ಹತ್ತನೇ ತರಗತಿಯ ಮಕ್ಕಳ ಭವಿಷ್ಯಕ್ಕೆ ಮಾರ್ಗದರ್ಶನ ( Career Guidance) ನೀಡಲು ಗೌರವಾನ್ವಿತ ಫಾದರ್ ಅನಿಲ ಪ್ರಸಾದರವರು ಚಿತ್ತಾಪುರದ ಬೆಥನಿ ಪ್ರೌಢ ಶಾಲೆಗೆ ಆಗಮಿಸಿದ್ದರು.

ಮಕ್ಕಳನ್ನು ತನ್ನ ಪರಿಣಾಮಕಾರಿ ಮಾತುಗಳಿಂದ ಆಕರ್ಷಿಸುತ್ತ ನೊಣ ಮತ್ತು ಜೆನ್ನೋಣಗಳಲ್ಲಿರುವ ವ್ಯತ್ಯಾಸವನ್ನು ತಿಳಿಸುತ್ತ ತಮ್ಮ ಮಾತನ್ನು ಮುಂದುವರೆಸಿದರು. ಮಕ್ಕಳು ಈ ವಯಸ್ಸಿನಲ್ಲಿ ಮಾಡುವ ಎಲ್ಲ ತಪ್ಪುಗಳನ್ನು ಇಲ್ಲಿನ ಶಿಕ್ಷಕರು ಕ್ಷಮಿಸುವಂತೆ ಮುಂದಿನ ಜೀವನ ನಿಮಗೆ ಕ್ಷಮಿಸುವುದಿಲ್ಲ. “ಉಪ್ಪು ತಿಂದವನು ನೀರು ಕುಡಿಯಲೇ ಬೇಕು” ಎಂಬುದನ್ನು ಮಕ್ಕಳಿಗೆ ಮನದಟ್ಟು ಮಾಡಿದರು.

ನಂತರ 10ನೇ ತರಗತಿಯಲ್ಲಿ ಉತ್ತೀರ್ಣರಾದ ಮೇಲೆ ಇರುವಂತಹ ಕಲೆ, ವಿಜ್ಞಾನ, ವಾಣಿಜ್ಯ (Arts, Commerce, Science) ವಿಷಯಗಳು ಮತ್ತು ಅದರಲ್ಲಿರುವ ವಿಶೇಷತೆಗಳನ್ನು ಮಕ್ಕಳಿಗೆ ಅರ್ಥೈಸಿದರು.

ಮಾರ್ಚ 12, 2022ರ ಶನಿವಾರದಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಗೌರವಾನ್ವಿತ ಫಾ. ಅನಿಲ ಪ್ರಸಾದರವರು ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬೆಥನಿ ಪ್ರೌಢ ಶಾಲೆಯ ಎಲ್ಲ ಶಿಕ್ಷಕರನ್ನು ಒಟ್ಟುಗೂಡಿಸಿ ತಮ್ಮ ಪ್ರೇರಣಾತ್ಮಕ ಮಾತುಗಳಿಂದ ಮನಸೆಳೆದರು.ಇಂದಿನ ಈ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ತಿಳಿಸುತ್ತ ಶಿಕ್ಷಕ ವೃತ್ತಿ ಎಂಬುದು “ಮಾಡು ಇಲ್ಲವೇ ಮಡಿ” ಎಂಬ ಗಾದೆಯಂತೆ ಆಗಿದೆ. ಇಲ್ಲಿ ಮಕ್ಕಳನ್ನು ಮೌಲ್ಯಯುತರನ್ನಾಗಿ ಮಾಡಲು ಮೊದಲು ಶಿಕ್ಷಕರು ಮೌಲ್ಯಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡಿರಬೇಕು. ಈಗಿನ ಮಕ್ಕಳು ಹೇಳಿದರೆ ಕೇಳುವವರಲ್ಲ. ಹೇಳಿ ಕೇಳುವ ಕಾಲ ಮುಗಿದು ಹೋಯಿತು. ಇನ್ನೇನು ಉಳಿದಿದ್ದು ಮಾಡಿ ತೋರಿಸುವ ಕಾಲ ಎಂಬುದನ್ನು ಹಲವಾರು ಜೀವಂತ ಉದಾಹರಣೆಗಳ ಮೂಲಕ ಸ್ಪಷ್ಟಪಡಿಸಿದರು. ಅಲ್ಲದೆ ಶಿಕ್ಷಕರಿಂದ ಹಲವಾರು ಚಟುವಟಿಕೆಗಳನ್ನು ಮಾಡಿಸಿ ಶಿಕ್ಷಕ ವೃತ್ತಿಯ ಮಹತ್ವವನ್ನು ಮನಗಾಣಿಸಿದರು.

ಕೊನೆಗೆ ಶಿಕ್ಷಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತ ಒಂದು ಮುಷ್ಟಿಯಷ್ಟು ಹೆಸರು ಕಾಳುಗಳನ್ನು ನೀರಿನಲ್ಲಿ ನೆನೆಸಿಟ್ಟರೆ ಅದರಲ್ಲಿ ಹತ್ತರಿಂದ ಇಪ್ಪತ್ತು ಕಾಳುಗಳು ನೀರನ್ನು ಹೀರಿಕೊಳ್ಳದೆ ಮೊದಲಿದ್ದ ಆಕಾರದಲ್ಲಿಯೇ ಇರುತ್ತವೆ. ಅದೇ ರೀತಿ ಎಲ್ಲ ಮಕ್ಕಳಲ್ಲಿ ಕೆಲವು ಮಕ್ಕಳನ್ನು ಸಹಜವಾಗಿಯೇ ಸುಧಾರಿಸುವುದು ಕಷ್ಟ ಸಾಧ್ಯವಾಗಿರುತ್ತದೆ ಎಂಬುದನ್ನು ಬಹಳ ಅರ್ಥಪೂರ್ಣವಾಗಿ ವಿವರಿಸಿದರು.

 

 

 

 

 

 

 

 

ಶ್ರೀಮತಿ ಸುಷ್ಮಾ, ಸಹ ಶಿಕ್ಷಕಿ)
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ