Print

Nov 24 : ದಿನಾಂಕ 17.11.22ರಂದು ದಕ್ಷಿಣ ಪ್ರಾಂತ್ಯದ ಪ್ರಾಂತ್ಯಾಧಿಕಾರಿಗಳಾದ ಭಗಿನಿ ಸ್ಯಾಲಿರವರು ಬೆಥನಿ ಪ್ರೌಢ ಶಾಲೆ ಚಿತ್ತಾಪೂರ ಹಾಗೂ ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಅಧಿಕೃತ ಭೇಟಿ ನೀಡಿದರು. ಅವರನ್ನು ಸನ್ಮಾನಿಸಲು ಈರ್ವರು ಮುಖ್ಯೋಪಾಧ್ಯಾಯಿನಿಯರು ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.

ಅಧ್ಯಕ್ಷರಾಗಿ ಶಾಲಾ ಸಂಚಾಲಕರಾದ ಭಗಿನಿ ಸಿಂಥಿಯಾ, ಮುಖ್ಯ ಅತಿಥಿಗಳಾಗಿ ಭಗಿನಿ ಸ್ಯಾಲಿ, ಭಗಿನಿ ಅವೆಲಿನ್, ಭಗಿನಿ ಕವಿತಾ ಮತ್ತು ಶ್ರೀ ಶಿವಕಾಂತರವರು ಆಗಮಿಸಿದ್ದರು. ಈ ಕಾರ್ಯಕ್ರಮವನ್ನು ಮಕ್ಕಳು ಪ್ರಾರ್ಥನಾ ನೃತ್ಯದೊಂದಿಗೆ ಆರಂಭಿಸಿ ದೀಪ ಬೆಳಗಿಸಿ, ಬೆಥನಿ ಸಂಸ್ಥೆಯ ಸ್ಥಾಪಕರಾದ ಫಾದರ್ ರೇಮಂಡ್ ಮಸ್ಕರೇನಸ್‍ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಅತಿಥಿಗಳು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಬೆಥನಿ ಪ್ರೌಢ ಶಾಲೆಯ ಮಕ್ಕಳು ಸ್ವಾಗತ ನೃತ್ಯವನ್ನು ಪ್ರದರ್ಶಿಸಿ ನಂತರ ಭಗಿನಿ ಸ್ಯಾಲಿರವರಿಗೆ ಈರ್ವರೂ ಮುಖ್ಯೋಪಾಧ್ಯಾಯಿನಿಯರು ಶಾಲು ಹೊದಿಸಿ ಮಾಲೆ ಹಾಕಿ ಸನ್ಮಾನಿಸಿದರು.

ಬೆಥನಿ ಪ್ರೌಢಶಾಲೆಯ ಮಕ್ಕಳು ಕೇಂದ್ರೀಯ ಮೌಲ್ಯಗಳಲ್ಲೊಂದಾದ ಸತ್ಯ, ಪ್ರೀತಿ, ನ್ಯಾಯ ಮತ್ತು ಶಾಂತಿಯ ಸಂದೇಶವುಳ್ಳ ನಾಟಕವನ್ನು ಆಂಗ್ಲ ಭಾಷೆಯಲ್ಲಿ ಪ್ರದರ್ಶಿಸಿದರು. ಹಾಸ್ಯ ಮತ್ತು ಮೌಲ್ಯಯುತವಾದ ನಾಟಕ ಭಗಿನಿ ಸ್ಯಾಲಿರವರ ಮನಸೂರೆಗೊಂಡಿತು. ಎರಡು ಶಾಲೆಯ ಮಕ್ಕಳು ಕೇಂದ್ರೀಯ ಮೌಲ್ಯಗಳನ್ನು ಅರ್ಥಭರಿತವಾಗಿ ಪಠಿಸಿದರು.
ನಂತರ ಭಗಿನಿ ಸ್ಯಾಲಿರವರು ಮಕ್ಕಳನ್ನು ಕುರಿತು ಮೌಲ್ಯಯುತವಾದ ಕಥೆಯನ್ನು ಹೇಳುತ್ತಾ, ಕಾಗದಕ್ಕೂ ಐದುನೂರು ರೂಪಾಯಿ ನೋಟಿಗೂ ಇರುವ ವ್ಯತ್ಯಾಸವನ್ನು ತಿಳಿಸಿದರು, ಮಕ್ಕಳು ಎಂದಿಗೂ ಹಣದ ನೋಟಾಗಬೇಕೆ ಹೊರತು ಕಾಗದವಾಗಬಾರದು ಎಂದು ಹೇಳಿದರು. ಕಾರ್ಯಕ್ರಮದ ಕೊನೆಯ ಘಟ್ಟವಾಗಿ ಶ್ರೀ ದೇವಪ್ಪರವರು ಸರ್ವ ಅತಿಥಿ ಗಣ್ಯರಿಗೂ ವಂದನಾರ್ಪಣೆಯನ್ನು ಸಲ್ಲಿಸಿದರು.

ಎರಡು ಶಾಲೆಯ ಶಿಕ್ಷಕರನ್ನು ಭಗಿನಿ ಸ್ಯಾಲಿರವರು ಭೇಟಿ ಮಾಡಿದರು. ಶಿಕ್ಷಕರ ಸಾಧನೆಯನ್ನು ಹೊಗಳಿ, ಶಿಕ್ಷಣದ ಗುಣಮಟ್ಟವನ್ನು ಇನ್ನೂ ಹೆಚ್ಚಿಸುವಂತೆ ತಿಳಿಸಿದರು. ಶಿಕ್ಷಕರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

 

 

 

 

 

 

 

ಭಗಿನಿ ಕವಿತಾ, ಮುಖ್ಯೋಪಾಧ್ಯಾಯಿನಿ
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ