40 ವರ್ಷಗಳ ಕಾಲ ಬೆಥನಿ ವಿದ್ಯಾಸಂಸ್ಥೆಯಲ್ಲಿ ಸೇವೆ ಸಲ್ಲಿಸಿ 30-09-2021 ರಂದು ನಿವೃತ್ತರಾಗಿರುವ ಶ್ರೀಮತಿ ಲಿಲ್ಲಿರೀಟಾರವರಿಗೆ ದಿನಾಂಕ 02-10-2021 ರಂದು ಸಂತ ಜೋಸೆಫರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೋರೋನ ನಿರ್ಬಂಧನೆ ನಡುವೆಯು ಅರ್ಥಪೂರ್ಣ ವಿದಾಯ ಸಮಾರಂಭವನ್ನು ಸರಳವಾಗಿ ಆಚರಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಪ್ರಾಂತ್ಯಾಧಿಕಾರಿಣಿ ಸಹೋದರಿ ಸಹನಾರವರು ಅಲಂಕರಿಸಿದ್ದರು. ಧರ್ಮಕೇಂದ್ರದ ಧರ್ಮಗುರುಗಳಾದ ವಂದನೀಯ ಜಿ. ಜೋಸೆಫ್, ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಗಾಯತ್ರಿ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮಾನ್ ಈಶ್ವರ್, ಕಾನ್ವೆಂಟಿನ ಸುಪೀರಿಯರ್ ಹಾಗೂ ಆಂಗ್ಲ ಮಾಧ್ಯಮದ ಮುಖ್ಯೋಪಾಧ್ಯಾಯಿನಿ ಸ. ಮೋಲಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಸ. ಬೆಟ್ಟಿಯವರು ಅತಿಥಿ ಸ್ಥಾನಗಳನ್ನು ಅಲಂಕರಿಸಿ, ಮೂರೂ ಶಾಲೆಗಳ ಶಿಕ್ಷಕರೂ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸಣ್ಣ ಪ್ರಾರ್ಥನಾವಿಧಿಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿ, ವಿದ್ಯಾರ್ಥಿಗಳು ಸ್ವಾಗತ ನೃತ್ಯದ ಮೂಲಕ ಎಲ್ಲರನ್ನೂ ಸ್ವಾಗತಿಸಿದರು. ಇವರ 40 ವರ್ಷಗಳ ನಿಸ್ವಾರ್ಥ, ತ್ಯಾಗಮಯ, ಪ್ರೀತಿಯ ಸೇವೆಯನ್ನು ವರ್ಣಿಸಿ, ಸುಂದರ ಸನ್ಮಾನಪತ್ರ ವಾಚಿಸಿ, ಪೇಟ, ಶಾಲ್, ಹೂ ಹಾರ ಹಾಗೂ ಫಲಪುಷ್ಪದೊಂದಿಗೆ ಮುಖ್ಯೋಪಾಧ್ಯಾಯಿನಿ, ಶಿಕ್ಷಕವೃಂದ ಹಾಗು ಗಣ್ಯರೊಡಗೂಡಿ ಇವರನ್ನು ಸನ್ಮಾನಿಸಲಾಯಿತು. ಇವರ ಜೀವನದುದ್ದಕ್ಕೂ ಬೆನ್ನೆಲುಬಾಗಿ ಇವರ ಕಷ್ಟ-ಸುಖದಲ್ಲಿ ಭಾಗಿಯಾದ ಇವರ ಪತಿ ನಿವೃತ್ತ ಶಿಕ್ಷಕ ಶ್ರೀ ರೋಬರ್ಟ್ ಮೊಂತೇರೊರವನ್ನು ಇವರೊಂದಿಗೆ ಸನ್ಮಾನಿಸಲಾಯಿತು.

ತಮಗೆ ಸಂಸ್ಥೆ ನೀಡಿದ ಸಹಾಯವನ್ನು ಸ್ಮರಿಸಿ, 40ವರ್ಷಗಳ ಸೇವೆಯನ್ನು ಇದೇ ಸಂಸ್ಥೆಯಲ್ಲಿ ನೀಡಲು ಅನುವು ಮಾಡಿಕೊಟ್ಟ ಭೆಥನಿ ವಿದ್ಯಾ ಸಂಸ್ಥೆಯನ್ನು ಸ್ಮರಿಸಿ, ಅದನ್ನು ಎಂದಿಗೂ ಮರೆಯಲಾರೆ ಹಾಗೂ ಚಿರಋಣಿಯಾಗಿರುವೆ ಎಂದು ಶ್ರೀಮತಿ ಲಿಲ್ಲಿರೀಟಾರವರು ಹೇಳಿದರು. ಅಧ್ಯಕ್ಷರು ಹಾಗು ಅತಿಥಿಗಳು ಮಾತನ್ನಾಡಿ ಶ್ರೀಮತಿ ಲಿಲ್ಲಿರೀಟಾರವರ ನಿಸ್ವಾರ್ಥ ಸೇವೆಯನ್ನು ಹಾಡಿ ಹೊಗಳಿ ಅವರ ಮುಂದಿನ ಜೀವನಕ್ಕೆ ಶುಭಕೋರಿದರು.

ಮುಖ್ಯಶಿಕ್ಷಕಿ ಸಹೋದರಿ ಮೇರಿ ಲೋಪಿಸ್‍ರವರು, ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು, ಪ್ರತ್ಯಕ್ಷ, ಪರೋಕ್ಷವಾಗಿ ಸಹಕಾರ ನೀಡಿದ ಪ್ರತಿಯೊಬ್ಬರನ್ನೂ ಸ್ಮರಿಸಿ ವಂದಿಸಿದರು.

 

 

 

ಸಿಸ್ಟರ್ ಮೇರಿ ಎಲ್ ಲೋಪಿಸ್
ಸಂತ ಜೋಸೆಫರ ಕನ್ನಡ ಹಿ. ಪ್ರಾ. ಶಾಲೆ, ಕೆ. ಆರ್. ನಗರ